ಚಂದ್ರಭಾಗಾ ನದಿ ತೀರದ ವಿಠ್ಠಲನ ಪಂಢರಪುರ ಕ್ಷೇತ್ರ

tulunadlife official
0

--------
 ಚಿತ್ರ ಲೇಖನ:  ಶ್ರೀನಿವಾಸ ಜೋಕಟ್ಟೆ
----------

ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅವರು ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಸಹಯೋಗದಲ್ಲಿ ಅಕ್ಕಲಕೋಟ ನಗರದಲ್ಲಿ ಗಡಿನಾಡು ಕನ್ನಡ ಜಾಗತಿಕ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡ ಸಂದರ್ಭದಲ್ಲಿ 'ಗಡಿನಾಡು ಮಾಧ್ಯಮ‌ ಪ್ರಶಸ್ತಿ' ಸ್ವೀಕರಿಸಲು ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ಗೆ ಹೋಗುವ ಅವಕಾಶವೊಂದು ನನ್ನ ಪಾಲಿಗೆ ಒದಗಿ ಬಂದಿತ್ತು. ಅಲ್ಲಿಂದ ನಾವು ದಂಪತಿ ಪಂಢರಪುರ ವಿಠಲನ ಕ್ಷೇತ್ರಕ್ಕೆ ತೆರಳಿದ್ದೆವು. ಅಂದು ಪಂಢರಪುರ ವಿಠ್ಠಲನ ಪಾದಸ್ಪರ್ಶಕ್ಕೆ ಸರತಿ ಸಾಲಲ್ಲಿ ಸೇರಿಕೊಳ್ಳೋಣ ಎಂದರೆ ಆ ರವಿವಾರ ಭಕ್ತರ ಸಾಲು ಎಲ್ಲಿಂದ ಆರಂಭವಾಗಿದೆ ಎಂದು ಹುಡುಕುವುದೇ ಬಹಳ ಕಷ್ಟವಾಗಿತ್ತು. ಚಪ್ಪಲು ಬೇರೆ ತುಳಸಿಹಾರ ಮಾರಾಟಗಾರನ ಅಂಗಡಿಯಲ್ಲಿ ಬಿಟ್ಟುಬಂದಿದ್ದೆವು. ರಸ್ತೆಯಲ್ಲಿ ನಡೆದು ನಡೆದು ಒಂದೆಡೆ ಕಾಲು ನೋವಾಗಲು ಆರಂಭ. ರವಿವಾರದ ದಿನವಾದ್ದರಿಂದ ಭಕ್ತರ ಸಾಲು ಎಷ್ಟು ಉದ್ದವಾಗಿತ್ತು ಎಂದರೆ ಚಂದ್ರಭಾಗಾ ನದಿ ತೀರದತ್ತ ಹಾದು ಹೋಗಿತ್ತು. ಕೊರೊನಾ ಕಾಲದ ಎರಡು ವರ್ಷಗಳಲ್ಲಿ ಭಕ್ತರ ನೂಕು ನುಗ್ಗಲಿಗೆ ವಿರಾಮ ಹೇಳಲಾಗಿದ್ದರೂ ಇದೀಗ ಮತ್ತೆ ಎಂದಿನಂತೆಯೇ ಭಕ್ತರ ಆಗಮನವಾಗುತ್ತಿದೆ. ಇಲ್ಲಿ ಭಕ್ತರಿಗೆ ಜಾತಿ ಭೇದ ಇಲ್ಲ. ವಿಠ್ಠಲನ ಪಾದಸ್ಪರ್ಷದ ದರ್ಶನ ಭಾಗ್ಯ ಬೇಕೆಂದರೆ ಅಲ್ಲಿ ಸಾಲಲ್ಲಿ ಹೋಗಿ ಸೇರಿಕೊಳ್ಳಲೇಬೇಕಿತ್ತು. ಆ ದಿನ ಹೆಚ್ಚು ಸಮಯ ಸಾಲಲ್ಲಿ ಕಾಯುವಂತಿರಲಿಲ್ಲ. ಯಾಕೆಂದರೆ ಆ ಸಂಜೆಗೆ ನಾವು ಸೊಲ್ಲಾಪುರದಲ್ಲಿ ಮುಂಬಯಿ ಟ್ರೇನ್ ಹತ್ತಬೇಕಿತ್ತು. ಭಕ್ತರ ಈ ದೀರ್ಘಸಾಲು ಕಂಡರೆ  ಮಧ್ಯಾಹ್ನವಾದರೂ ಗರ್ಭಗುಡಿಗೆ ಪ್ರವೇಶ ಸಿಗುವುದು ಅನುಮಾನಿತ್ತು.(ಆನ್ ಲೈನ್ ಬುಕ್ಕಿಂಗ್ ಮೊದಲೇ ಮಾಡಿದ್ದರೆ  ಇಷ್ಟುದ್ಧ ಸಾಲಲ್ಲಿ ಸೇರಿಕೊಳ್ಳಬೇಕಿರಲಿಲ್ಲ.)



ಆದರೆ ಸಮಯದ ಅಭಾವ ಇರುವ ಭಕ್ತರಿಗೆ ವಿಠ್ಠಲನ ಮುಖದರ್ಶನದ ಪ್ರತ್ಯೇಕ ವ್ಯವಸ್ಥೆ ಇದೆ. ಹಾಗಾಗಿ ಅದರ ಲಾಭವನ್ನು ಪಡೆದುಕೊಂಡು ವಿಠ್ಠಲ ರುಕ್ಮಿಣಿಯವರ ಮುಖದರ್ಶನದ ಭಾಗ್ಯವನ್ನು ಪಡೆದು ಧನ್ಯರಾದೆವು.
ಹೊರಗಡೆ ಮೈಕ್ ನಲ್ಲಿ ಬೆಳಗಾವಿಯಿಂದ ಬಂದ ಕುಟುಂಬವೊಂದರ ಬಾಲಕಿ ತಪ್ಪಿಸಿ ಹೋದ ಬಗ್ಗೆ  ಕನ್ನಡದಲ್ಲಿ ಕೂಗುತ್ತಿದ್ದರು. ಪಂಢರಪುರ ಎಂದಾಗ ಕಾನಡಿ ವಿಠ್ಠಲನು ನೆನಪಾಗುತ್ತಾನೆ.ಪುರಂದರ ದಾಸರ ಪದ್ಯಗಳು ನೆನಪಾಗುತ್ತವೆ. ಹೌದು, ಆತ ಕನ್ನಡಿಗರ ವಿಠ್ಠಲ. ದೇವಳದ ಎದುರಿನಲ್ಲಿ ಭಜನೆಯ ಒಂದು ತಂಡ ಭಜನೆ ಹಾಡುತ್ತಿದ್ದರು. ರಸ್ತೆಯುದ್ದಕ್ಕೂ ಸಂಕೀರ್ತನೆ ಹೇಳುವ ತಂಡಗಳವರು ಎಲ್ಲೆಲ್ಲೂ ಕಾಣಸಿಗುತ್ತಿದ್ದರು.
ಸಾಕಷ್ಟು ಸಮಯ ಇದ್ದುದರಿಂದ ಅನಂತರ ಪಂಢರಪುರ ಕ್ಷೇತ್ರದ ಇತರ ಮಂದಿರಗಳ ವೀಕ್ಷಣೆಗೆ ಮುಂದಾದೆವು. ಒಂದಷ್ಟು ಖರೀದಿಯೂ ಮಾಡಬೇಕಿತ್ತು. ರೂಮ್ ಪಕ್ಕದಲ್ಲೇ ಇದ್ದುದರಿಂದ ಲಾಭವೇ ಆಗಿತ್ತು. ಖರೀದಿ ಮಾಡಿದ್ದನ್ನು ರೂಮಿನಲ್ಲಿ ಇಟ್ಟು ಮತ್ತೆ ವಾಪಸ್ ಬರುತ್ತಿದ್ದೆವು!



ಇತಿಹಾಸ : 
ಈ ವಿಠ್ಠಲ ಮಂದಿರವನ್ನು ಯಾರು ಕಟ್ಟಿದರು ,ಯಾರು ಮೂರ್ತಿ ಸ್ಥಾಪನೆ ಮಾಡಿದರು...ಎಂಬ ಬಗ್ಗೆ ನಿರ್ದಿಷ್ವವಾದ ಯಾವುದೇ ಉಲ್ಲೇಖಗಳು ಸಿಗುವುದಿಲ್ಲವಾದರೂ  ಶ್ರೀ ಪಂಢರಪುರದ  ವಿಠ್ಠಲ ರುಕ್ಮಿಣಿ ಮಂದಿರವನ್ನು 11 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು ಎನ್ನುತ್ತಾರೆ. ಮುಖ್ಯ ದೇವಾಲಯವನ್ನು 12 ನೇ ಶತಮಾನದಲ್ಲಿ ದೇವಗಿರಿಯ ಯಾದವ ಅರಸರು ನಿರ್ಮಿಸಿದರು.ಶ್ರೀ ವಿಠ್ಠಲಮಂದಿರವು ಇಲ್ಲಿನ ಮುಖ್ಯ ದೇವಾಲಯವಾಗಿದೆ.



ಆದರೆ ದೇವಾಲಯವನ್ನು ಕ್ರಿ.ಶ 1108–1152ರ ನಡುವೆ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ನಿರ್ಮಿಸಿದನೆಂದೂ.  ಅಲ್ಲದೆ, ದೇವಾಲಯದಲ್ಲಿ ಹೊಯ್ಸಳ ದೊರೆ ವೀರ ಸೋಮೇಶ್ವರನ ಶಾಸನವೊಂದಿದೆ, ಇದು ಕ್ರಿ.ಶ. 1237  ರಷ್ಟು ಹಿಂದಿನದು ಎನ್ನುವ ಮಾತೂ ಇದೆ.ದೇವಾಲಯದ ಕೆಲವು ಭಾಗಗಳು 12ನೇ ಅಥವಾ 13ನೇ ಶತಮಾನದಷ್ಟು ಹಳೆಯದಾದರೂ, ಅಸ್ತಿತ್ವದಲ್ಲಿರುವ ರಚನೆಯು ಮುಖ್ಯವಾಗಿ 17ನೇ ಶತಮಾನ ಅಥವಾ ನಂತರದ್ದು, ಮತ್ತು ನಂತರದ ಡೆಕ್ಕನ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಇತಿಹಾಸಕಾರರು. ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಜ ಕೃಷ್ಣದೇವನು ವಿಠ್ಠಲನ ವಿಗ್ರಹವನ್ನು ತನ್ನ ರಾಜ್ಯಕ್ಕೆ ಕೊಂಡೊಯ್ದನೆಂದೂ, ನಂತರ ಮತ್ತೊಮ್ಮೆ ಮಹಾರಾಷ್ಟ್ರದ ಭಕ್ತನು ಅದನ್ನು ಮರಳಿ ತಂದು ಇಲ್ಲಿ ಪುನಃ ಸ್ಥಾಪಿಸಿದನೆಂದೂ ಮತ್ತೊಂದು ಕತೆಯೂ ಇದೆ. ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಹೊರತು ಪಡಿಸಿದರೆ  ಇತರ ಮಂದಿರಗಳಲ್ಲಿ  ಭಕ್ತರ ಸಂಖ್ಯೆ ಬಹಳ ಕಡಿಮೆ.



ಪಂಢರಪುರದ ವೈಷ್ಣವ ಕುಂಭ:
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ಪಂಢರಪುರವೂ ಒಂದು. ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿಯಂದು ಪಂಢರಪುರ ಕ್ಷೇತ್ರಕ್ಕೆ ತಲುಪಲು ವಾರಕರಿಗಳು (ಭಕ್ತರು) ತಮ್ಮ ಮನೆಗಳಿಂದ ಹೊರಡುತ್ತಾರೆ. ಭಗವಾನ್ ವಿಷ್ಣುವಿನ ಅವತಾರ ವಿಠ್ಠಲ ಮತ್ತು ಅವರ ಪತ್ನಿ ರುಕ್ಮಣಿಯ ಗೌರವಾರ್ಥವಾಗಿ ವರ್ಷಕ್ಕೆ  ನಾಲ್ಕು ಬಾರಿ ಹಬ್ಬಗಳನ್ನು ಆಚರಿಸಲು ಈ ನಗರದಲ್ಲಿ ಜನರು ಸೇರುತ್ತಾರೆ.
ಇವುಗಳಲ್ಲಿ ಹೆಚ್ಚಿನ ಭಕ್ತರು ಆಷಾಢ ಮಾಸದಲ್ಲಿ ಮತ್ತು ನಂತರ ಕ್ರಮವಾಗಿ ಕಾರ್ತಿಕ, ಮಾಘ ಮತ್ತು ಶ್ರಾವಣ ಮಾಸಗಳಲ್ಲಿ ಸೇರುತ್ತಾರೆ.



ಈ ಯಾತ್ರೆಗಳನ್ನು ಕಳೆದ 800 ವರ್ಷಗಳಿಂದ ನಿರಂತರವಾಗಿ ಆಯೋಜಿಸಲಾಗಿದೆ ಎನ್ನುತ್ತಾರೆ.
ಭಗವಾನ್ ವಿಠ್ಠಲನ ದರ್ಶನವನ್ನು ಪಡೆಯಲು ದೇಶದ ಮೂಲೆ ಮೂಲೆಗಳಿಂದ ಜನರು ಧ್ವಜಗಳನ್ನು ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಈ ಯಾತ್ರಾಸ್ಥಳವನ್ನು ತಲುಪುತ್ತಾರೆ. ಈ ಪ್ರಯಾಣದಲ್ಲಿ ಕೆಲವರು ಅಳಂದಿಯಲ್ಲಿ ಒಟ್ಟುಸೇರಿ ಪುಣೆ ಮತ್ತು ಜಾಜೂರಿ ಮೂಲಕ ಪಂಢರಪುರ ತಲುಪುತ್ತಾರೆ. ಅವರಿಗೆ ಜ್ಞಾನದೇವ್ ಮೌಲಿ ಎಂಬ ಹೆಸರನ್ನು ನೀಡಲಾಗಿದೆ.



ಪಂಢರಪುರದ ಈ ದೇವಸ್ಥಾನಕ್ಕೆ 'ದಿಂಡಿ' ಎಂಬ ತಂಡಗಳಲ್ಲಿ ಮೆರವಣಿಗೆಯಲ್ಲಿ ಅವರೆಲ್ಲ ಬರಲು ಆರಂಭಿಸುತ್ತಾರೆ. ಪ್ರತೀ ವಾರಕರೀ ಯಾವುದಾದರೂ ದಿಂಡಿಯ ಸದಸ್ಯ ಆಗಿರುತ್ತಾರೆ. ಈ ಭಕ್ತರು ಕೇಸರಿ ಧ್ವಜ, ತುಳಸಿ ಗಿಡಗಳನ್ನು ಹೊತ್ತುಕೊಂಡು, ಹಾಡುತ್ತಾ ಕುಣಿಯುತ್ತಾ ಬರುತ್ತಾರೆ. ಏಳನೇ ಶತಮಾನದಿಂದ ಈ ಪರಂಪರೆ ಆರಂಭವಾಗಿದ್ದು  ಭಕ್ತರು(ವಾರಕರಿ) ದಿಂಡಿ ಯಾತ್ರೆಯ ಮೂಲಕ ಆಷಾಢ ಏಕಾದಶಿಗೆ ಪಂಢರಪುರವನ್ನು ತಲುಪುತ್ತಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿಯವರೇ  ಆಷಾಢ ಏಕಾದಶಿಗೆ ವಿಠ್ಠಲನ ಪೂಜೆಗೆಂದೇ ಬರುತ್ತಾರೆ. ಉಪಮುಖ್ಯಮಂತ್ರಿ ಕಾರ್ತಿಕ ಏಕಾದಶಿಗೆ ಪೂಜೆಗೆ ಬರುತ್ತಾರೆ.



ವಾರೀಯಲ್ಲಿ ಸಾಮಾನ್ಯವಾಗಿ ಎರಡು ಪ್ರಮುಖ ಪಾಲಕಿಗಳಿವೆ. ಇವುಗಳಲ್ಲಿ ಒಂದು ಸಂತ ಜ್ಞಾನೇಶ್ವರ ಹಾಗೂ ಇನ್ನೊಂದು ಸಂತ ತುಕಾರಾಮ್ ಅವರದ್ದು. ಈ ವಾರಕರೀ ಸಂಪ್ರದಾಯದವರದ್ದು ಸುಮಾರು ಹದಿನೆಂಟು ದಿನಗಳ ಪಾದಯಾತ್ರೆ. ಆಷಾಢ ಏಕಾದಶಿಗೆ ಪಂಢರಪುರ ತಲುಪುತ್ತಾರೆ. ವಿಶ್ವಕ್ಕೆ ಏಕತೆ ಮತ್ತು ಮಾನವೀಯತೆಯ ಸಂದೇಶ ನೀಡುತ್ತಾರೆ ಈ ವಾರಕರಿಗಳು. ಪುಣೆ ಜಿಲ್ಲೆಯ ಆಲಂದೀ ಮತ್ತು ದೆಹೂ ಎಂಬಲ್ಲಿಂದ ಪಂಢರಪುರಕ್ಕೆ ಪಾಲಕಿಯು ಹೊರಡುತ್ತದೆ.



ಸ್ಥಳ ಪುರಾಣ : 
ಪಂಢರಪುರದ ವಿಠ್ಠಲ ರುಕ್ಮಿಣಿ ದೇವಾಲಯವು ಪಶ್ಚಿಮ ಭಾರತದ ದಕ್ಷಿಣ ಮಹಾರಾಷ್ಟ್ರ ರಾಜ್ಯದಲ್ಲಿ ಭೀಮಾ ನದಿಯ ದಡದಲ್ಲಿರುವ ಸೋಲಾಪುರ ಪಟ್ಟಣದ ಪಶ್ಚಿಮಕ್ಕೆ ನೆಲೆಗೊಂಡಿದೆ.  ಈ ದೇವಾಲಯದಲ್ಲಿ ಶ್ರೀಕೃಷ್ಣನನ್ನು ವಿಠ್ಠಲನ ರೂಪದಲ್ಲಿ ಪೂಜಿಸಲಾಗುತ್ತದೆ. ಭಕ್ತರಾಜ ಪುಂಡಲೀಕನ ಸ್ಮಾರಕವನ್ನು ಇಲ್ಲಿ ನಿರ್ಮಿಸಲಾಗಿದೆ. ಭಗವಾನ್ ವಿಷ್ಣುವಿನ ಅವತಾರವಾದ ವಿಠ್ಠಲ ಮತ್ತು ಅವನ ಪತ್ನಿ ರುಕ್ಮಿಣಿ ಇಲ್ಲಿನ ಪ್ರಮುಖ ದೇವರು.ಪ್ರತಿ ವರ್ಷ ದೇವಶಯನಿ ಏಕಾದಶಿಯಂದು ಪಂಢರಪುರದಲ್ಲಿ ವಿಠ್ಠಲ ಮತ್ತು ರುಕ್ಮಿಣಿಯ ಮಹಾಪೂಜೆಯನ್ನು ನೋಡಲು ಲಕ್ಷಾಂತರ ಜನರು ಸೇರುತ್ತಾರೆ. ಈ ಸ್ಥಳಕ್ಕೆ ಪುಂಡಲೀಕಪುರ ಎಂಬ ಹೆಸರಿದ್ದರೂ ನಂತರ ಅಪಭ್ರಂಶ  ಪಂಢರಾಪುರ ಆಗಿದೆ.



ಭಕ್ತನ ಕತೆ: 
ಆರನೇ ಶತಮಾನದಲ್ಲಿ ಜನಿಸಿದ ಸಂತ ಪುಂಡಲೀಕನು ತನ್ನ ಮಾತಾಪಿತರ ಮಹಾನ್ ಭಕ್ತನಾಗಿದ್ದನು. ಅವನ ನೆಚ್ಚಿನ ದೇವರು ಶ್ರೀಕೃಷ್ಣ. ಅವನ ಭಕ್ತಿಗೆ ಪ್ರಸನ್ನನಾದ ಶ್ರೀಕೃಷ್ಣ ಒಂದು ದಿನ ರುಕ್ಮಣಿಯೊಡನೆ ಪ್ರತ್ಯಕ್ಷನಾದ.

ಪುಂಡಲೀಕನು ತನ್ನ ತಂದೆತಾಯಿಯ ಸೇವೆಯಲ್ಲಿ ನಿರತನಾಗಿದ್ದಾಗಲೇ, ಶ್ರೀಕೃಷ್ಣನು ರುಕ್ಮ ಣಿ ಸಹಿತ ಅವನಿಗೆ ದರ್ಶನ ನೀಡಲು ಬಾಗಿಲಿಗೆ ಬಂದಿದ್ದನು. ಆದರೆ ಪುಂಡಲೀಕನು ಆ ಸಮಯದಲ್ಲಿ ತನ್ನ ತಂದೆಯವರ ಪಾದಗಳನ್ನು ಒತ್ತುತ್ತಿದ್ದನು. ಆ ವೇಳೆ ದೇವರು ಬಂದರೂ ಆತ ತಂದೆತಾಯಿಯ ಸೇವೆಯನ್ನು ಬಿಟ್ಟು ಬರಲಿಲ್ಲ.ದೇವರಿಗೆ ಅಲ್ಲೆ ನಿಲ್ಲುವಂತೆ ಇಟ್ಟಿಗೆಯನ್ನು ಸರಿಸಿದ ಹೊರತು ಆತ ಮೇಲೇಳಲಿಲ್ಲ. ಭಗವಂತ ತನ್ನ ಸೊಂಟದ ಮೇಲೆ ಕೈಯಿಟ್ಟು ಆ ಇಟ್ಟಿಗೆಯ ಮೇಲೆ ನಿಂತನು. ಅದಕ್ಕಾಗಿಯೇ  ದೇವಾಲಯದಲ್ಲಿ ವಿಠ್ಠಲ ದೇವರ ವಿಗ್ರಹವು ತನ್ನ ಸೊಂಟದ ಮೇಲೆ ತನ್ನ ಕೈಗಳನ್ನು ಇಟ್ಟುಕೊಂಡು ಇಲ್ಲಿ ನಿಂತಿದೆ.ಇಲ್ಲಿ ವಿಠ್ಠಲನಿಗೆ ಪಾಂಡುರಂಗ ಎಂಬ ಬಿರುದು ಕೂಡ ಸಿಕ್ಕಿದೆ.  
ದೇವಾಲಯವನ್ನು ಪ್ರವೇಶಿಸುವಾಗ ಬಾಗಿಲಿನ ಬಳಿ ಭಕ್ತ ಚೋಖಮೇಳನ ಸಮಾಧಿ ಇದೆ.  ನಾಮದೇವನ ಸಮಾಧಿಯು ಇದೆ. ಆಚೆಗೆ ರುಕ್ಮಿಣಿ, ಬಲರಾಮ, ಸತ್ಯಭಾಮಾ, ಜಾಂಬವತಿ ಮತ್ತು ಶ್ರೀ ರಾಧಾ ದೇವಾಲಯವು ಆ ವೃತ್ತದೊಳಗಿನ ದೇವಾಲಯಗಳಾಗಿವೆ.  ಪಂಢರಪುರದ ದೇವಿ ದೇವಾಲಯಗಳಲ್ಲಿ ಪದ್ಮಾವತಿ, ಅಂಬಾಬಾಯಿ ಮತ್ತು ಲಖುಬಾಯಿ ಅತ್ಯಂತ ಪ್ರಸಿದ್ಧವಾಗಿದ್ದಾರೆ.  ಚಂದ್ರಭಾಗದ ಆಚೆ ಶ್ರೀ ವಲ್ಲಭಾಚಾರ್ಯ ಮಹಾಪ್ರಭುಗಳು, ಮೂರು ಮೈಲಿ ದೂರದ ಹಳ್ಳಿಯಲ್ಲಿ ಜನಾಬಾಯಿಯ ದೇವಸ್ಥಾನವಿದೆ.




ಪಂಢರಪುರದಲ್ಲಿ ಚಂದ್ರಭಾಗ ನದಿಯಲ್ಲಿ ಸ್ನಾನಮಾಡಿ (ಭೀಮಾ ನದಿ ಪಂಢರಪುರದ ಬಳಿ ಚಂದ್ರಾಕಾರವಾಗಿ ಹರಿದಿರುವ ಕಾರಣ ಚಂದ್ರಭಾಗ ಎಂಬ ಹೆಸರು) ಪಾಂಡುರಂಗ ವಿಠಲನ ದರ್ಶನ ಮಾಡಿ ಆತನ ಪಾದದಲ್ಲಿ ಮಸ್ತಕವನ್ನಿಟ್ಟರೆ  ಜನ್ಮ ಪಾವನವಾಯಿತೆಂದು ತಿಳಿಯುವ ಅನೇಕ ಭಕ್ತರು ಇಂದಿಗೂ ಇದ್ದಾರೆ. ಭಕ್ತಿಗೆ ,ಭಕ್ತರಿಗೆ ಜಾತಿಭೇದವಿಲ್ಲ. ಪಾಂಡುರಂಗ ವಿಠಲನನ್ನು  ಜಾತಿಭೇದವಿಲ್ಲದೆ ಭಜಿಸುತ್ತಾರೆ.

ಪಾಂಡುರಂಗ ವಿಠಲ ಮಂದಿರಕ್ಕೆ ಪೂರ್ವಾಭಿಮುಖವಾಗಿ ಮಹಾದ್ವಾರ ಸಹಿತ ಮೂರು ಬಾಗಿಲುಗಳು ಇರುತ್ತವೆ.
ಶ್ರೀ ಪಂಢರಾಪುರ ಕ್ಷೇತ್ರವು ಭಕ್ತಜನತೆಗೆ ಭೂವೈಕುಂಠ. ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿ,  ನಂತರ ಶ್ರೀ ಪಾಂಡುರಂಗ ದರ್ಶನ, ಅಲ್ಲಿಂದ  ಕ್ಷೇತ್ರ ಪ್ರದಕ್ಷಿಣೆ ಹಾಗೂ ಹರಿಕೀರ್ತನೆ....ಈರೀತಿ ಚತುರ್ವಿಧ ಭಕ್ತರ ಧಾರ್ಮಿಕ ಕಾರ್ಯಕ್ರಮ ಆಗಿರುತ್ತದೆ.

ಪಂಢರಪುರದಲ್ಲಿ ಅಸಂಖ್ಯ ತೀರ್ಥಗಳಿವೆ. ಅವುಗಳಲ್ಲಿ ಕೆಲವು ನಾಶವಾಗಿವೆ. ಲೋಹದಂಡ ತೀರ್ಥ,ಗಣಪತಿ ತೀರ್ಥ,ವ್ಯಾಸ ತೀರ್ಥ,ಸಂತೀರ್ಥ, ಅಗಸ್ತ್ಯ ತೀರ್ಥ, ಚಕ್ರತೀರ್ಥ, ವಿಷ್ಣುಪದ ತೀರ್ಥ,ಕಲಶ ತೀರ್ಥ ಸಹಿತ  ಸುಮಾರು ಇಪ್ಪತ್ತೈದರಷ್ಟು ತೀರ್ಥಗಳು ಈಗಲೂ ಇಲ್ಲಿವೆ.ಅನೇಕ ದರ್ಶನ ಯೋಗ್ಯ ಮಂದಿರಗಳು ಇವೆ.
ವಿಠ್ಠಲ ಮಂದಿರದ ಎದುರಿಗೆ  ಮಹಾದ್ವಾರ  ಘಾಟ್ ಸಮ್ಮುಖದ ಚಂದ್ರಭಾಗದಲ್ಲಿರುವ ಪುಂಡಲೀಕ ಮಂದಿರ,( ಇಲ್ಲೇ ಲೋಹದಂಡ ತೀರ್ಥ),ಪದ್ಮಾವತಿ ಗುಡಿ, ರುಕ್ಮಿಣಿ ಮಂದಿರ, ಶ್ರೀ ದತ್ತ ಮಂದಿರ, ವ್ಯಾಸ ಮಂದಿರ, ಈಶಾನ್ಯದಲ್ಲಿರುವ ಕಾಲಭೈರವ- ಶಾಕಾಂಬರಿ ಮಂದಿರ, ಮಲ್ಲಿಕಾರ್ಜುನ ಮಂದಿರ, ಅಮೃತೇಶ್ವರ ಮಂದಿರ,ಉತ್ತರಕ್ಕೆ ತ್ರ್ಯಂಬಕೇಶ್ವರ ಮಂದಿರ,ಭೂತೇಶ್ವರ  ಮಹಾದೇವ ಮಂದಿರ, ವಟೇಶ್ವರ ಮಹಾದೇವ ಮಂದಿರ, ಭೀಮಾ ಮಂದಿರ, ಗೋಪಾಲಕೃಷ್ಣ ಮಂದಿರ, ದ್ವಾರಕಾಧೀಶ ಮಂದಿರ, ಹೋಲ್ಕರ್ ಶ್ರೀರಾಮ ಮಂದಿರ,ಕಾಲಾ ಮಾರುತಿ ಗಣಪತಿ,ಅಂಬಾಬಾಯಿ,ನರಸಿಂಹ ಮಂದಿರ ಸಮರ್ಥ ಮಂದಿರ, ವಿಷ್ಣು ಪದ, ನಾರದ ಮಂದಿರ,........ಹೀಗೆ ಪರಿಸರದಲ್ಲಿ ಮತ್ತು ಚಂದ್ರಭಾಗ ನದಿ ತೀರದಲ್ಲಿ ಹಲವಾರು ಮಂದಿರಗಳು  ಗಮನ ಸೆಳೆಯುತ್ತವೆ.

ಇವಲ್ಲದೆ  ನಲುವತ್ತರಷ್ಟು ಸಾಂಪ್ರದಾಯಿಕ ಮಠಗಳೂ ಪಂಢರಪುರದಲ್ಲಿವೆ. ಅದೇ ರೀತಿ ಫಡಗಳೂ ಗಮನ ಸೆಳೆಯುತ್ತವೆ. ಭಕ್ತರಿಗಾಗಿ  ಮೂರು ಡಜನ್ನಿಗೂ ಹೆಚ್ಚು ಧರ್ಮಶಾಲೆಗಳೂ ಇವೆ.

13 ನೇ ಶತಮಾನದಲ್ಲಿ ಜ್ಞಾನೇಶ್ವರರಿಂದ ಇಂದಿನವರೆಗೆ, ಹೆಚ್ಚಿನ ಭಕ್ತರು ವಿಠ್ಠಲನನ್ನು ಕೃಷ್ಣನ ರೂಪವೆಂದು ಪರಿಗಣಿಸುತ್ತಾರೆ.  ಆದರೆ ಸಾಂಪ್ರದಾಯಿಕ ವೈದಿಕ ಅಥವಾ ಪುರಾಣ ಗ್ರಂಥಗಳು ಇದನ್ನು ಒಪ್ಪುವುದಿಲ್ಲ.  ಲೇಖಕ ರಾಮಚಂದ್ರ ಚಿಂತಾಮನ್ ಧಾರೆ ವಿಠ್ಠಲ ಸಂಪ್ರದಾಯಗಳನ್ನು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ, ಒಂದು ಸಾವಿರ ವರ್ಷಗಳ ಹಿಂದೆ ವಿಠ್ಠಲ ಬಹುಶಃ ಸ್ಥಳೀಯ ಗೋವಳರಿಂದ ಪೂಜಿಸಲ್ಪಟ್ಟ ಗ್ರಾಮ ದೇವತೆಯೂ ಆಗಿರಬಹುದು. ಆದ್ದರಿಂದ ಬಹುಶಃ ವಿಠ್ಠಲನು ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದನಂತೆ.

ದೇವಗಿರಿಯ (ಇಂದಿನ ದೌಲತಾಬಾದ್) ಯಾದವ ರಾಜರು ಬಹುಶಃ ಕೃಷ್ಣನೊಂದಿಗೆ ವಿಠ್ಠಲನ ಒಡನಾಟವನ್ನು ಪ್ರೋತ್ಸಾಹಿಸಿದವರು. ಅವನು ಕೃಷ್ಣನ ವಂಶಸ್ಥನೆಂದು ಹೇಳಿಕೊಂಡನು ಮತ್ತು ಮರಾಠಿ ಭಾಷೆಗೆ ಸಹಾಯಕನಾಗಿದ್ದನು. 8 ರಿಂದ 13 ನೇ ಶತಮಾನದವರೆಗೆ ಅವರ ಆಳ್ವಿಕೆಯಲ್ಲಿ, ಅವರು 'ವೀರ' ಕಲ್ಲುಗಳನ್ನು ಸ್ಥಾಪಿಸಿದರು, ಅಲ್ಲಿ ಸ್ಥಳೀಯ ವೀರರನ್ನು ದೇವರಂತೆ ಪೂಜಿಸಲಾಗುತ್ತದೆ.  ವಿಠ್ಠಲನ ಚಿತ್ರವು ಕೃಷ್ಣ ಅಥವಾ ಇತರ ದೇವತೆಗಳೊಂದಿಗೆ ಸಂಬಂಧ ಹೊಂದುವ ಮೊದಲು ವೀರ ವ್ಯಕ್ತಿಯ ಚಿತ್ರವಾಗಿರಬಹುದು ಎನ್ನುತ್ತಾರೆ ಇನ್ನು ಕೆಲವರು. ಏನೇ ಇರಲಿ, ಮಹಾರಾಷ್ಟ್ರದ ಹೆಚ್ಚಿನ ಕವಿ-ಸಂತರಾದ ಜ್ಞಾನೇಶ್ವರ್, ನಾಮದೇವ್, ಏಕನಾಥ್, ಜನಾಬಾಯಿ ಮತ್ತು ತುಕಾರಾಂ ಅವರು ವಿಠ್ಠಲನನ್ನು  ಕೇವಲ ವಿಠ್ಠಲನನ್ನು ತಂದೆ ಎಂದು ಪರಿಗಣಿಸಿದ್ದಾರೆ, 
 ನದಿ ತೀರದ ಸೌಂದರ್ಯ: ಪಂಢರಪುರದ ಸೌಂದರ್ಯ ಇರುವುದೇ ಚಂದ್ರಭಾಗಾ ನದಿ ತೀರದ ಪರಿಸರದಲ್ಲಿ. ಇಲ್ಲಿ ಗಂಗಾಮಾತೆಗೆ ತೆಂಗಿನಕಾಯಿ, ಹಾರ, ದೀಪ ಅರ್ಪಿಸುವ ಪರಂಪರೆ ಇದೆ. ತೀರದಲ್ಲಿ ಅನೇಕ ಪುರಾತನ‌ ಮಂದಿರಗಳಿವೆ. ವಿಠ್ಠಲ ರುಕ್ಮಿಣಿಯರ ಅಲ್ಲಲ್ಲಿ ಪ್ರತಿಮೆಗಳಿದ್ದು ಯಾತ್ರಾರ್ಥಿಗಳು ಅದರ ಪಕ್ಕ ನಿಂತು  ಫೋಟೋ ತೆಗೆಸಿಕೊಳ್ಳುತ್ತಾರೆ. ದೋಣಿ ಸವಾರಿಯೂ ಇದೆ. ಮಂದಿರದ ಮುಖ್ಯ ರಸ್ತೆಯಲ್ಲಿ ತಿರುಗಾಡುವುದೂ ಭಕ್ತರಿಗೆ  ವಿಶೇಷ ಖುಷಿ. 

ಬರುವ ದಾರಿ : 
ಪಂಢರಪುರಕ್ಕೆ ಹತ್ತಿರವಿರುವ ಸೊಲ್ಲಾಪುರ ಅಥವಾ ಕುರ್ದುವಾಡಿ ರೈಲ್ವೆ ಜಂಕ್ಷನ್‌ನಿಂದ ಸಂಪರ್ಕ ಹೊಂದಿದೆ. ಲಾತೂರ್ ಎಕ್ಸ್‌ಪ್ರೆಸ್, ಮುಂಬೈ ಎಕ್ಸ್‌ಪ್ರೆಸ್, ಹುಸೇನಸಾಗರ್ ಎಕ್ಸ್‌ಪ್ರೆಸ್, ಸಿದ್ಧೇಶ್ವರ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ಕುರ್ದುವಾಡಿ ಜಂಕ್ಷನ್ ಮೂಲಕ ಪ್ರತಿದಿನ ಮುಂಬೈಗೆ ಹೋಗುತ್ತವೆ. ಪಂಢರಪುರದಿಂದ ಮುಂಬೈಗೆ ಪುಣೆ ಮೂಲಕ ರೈಲು ಕೂಡ ಇದೆ.ಉತ್ತರ ಕರ್ನಾಟಕದಿಂದಲೂ ಹಲವಾರು ರಸ್ತೆಗಳಿವೆ. ಸೊಲ್ಲಾಪುರ ಕರ್ನಾಟಕ -  ಮಹಾರಾಷ್ಟ್ರದ ಗಡಿ ಜಿಲ್ಲೆ .

Post a Comment

0Comments

Post a Comment (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!